ಹುಬ್ಬಳ್ಳಿಯಿಂದ ೪ ಕಿಮೀ ದೂರದಲ್ಲಿರುವ ಉಣಕಲ್ ಎಂಬಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ. ಹಳೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪ ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಉಣಕಲ್ ಇದೆ. ಉಣಕಲ್ಲಿನಲ್ಲಿ ಪ್ರಖ್ಯಾತವಾದ ಉಣಕಲ್ ಕೆರೆ ಇದೆ. ಅಲ್ಲಿಂದ ಸುಮಾರು ಒಂದು ಕಿಮೀ. ದೂರದಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ. ಇದನ್ನು ಹುಡುಕಲು ಸ್ವಲ್ಪ ಕಷ್ಟ ಪಡಬೇಕು. ಇದು ಚಾಲುಕ್ಯ ಶೈಲಿಯಲ್ಲಿ ಕಟ್ಟಿದ ಕಲ್ಲಿನ ದೇವಾಲಯ. ಇದು ಸುಮಾರು ೯೦೦ ವರ್ಷ ಪುರಾತನವಾದುದು. ಹುಬ್ಬಳ್ಳಿಯಿಂದ ಪುಣೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೪ ಕಿಮೀ ಸಾಗಿದಾಗ ಸಿಗುವ ಉಣಕಲ್ ಕೆರೆಯ ಪಕ್ಕ ಬಲಕ್ಕೆ ತಿರುಗಿ ಸುಮಾರು ಒಂದು ಕಿಮೀ ಸಾಗಿದರೆ ಈ ದೇವಸ್ಥಾನ ಸಿಗುತ್ತದೆ. ಇದರ ಗರ್ಭಗುಡಿಯಲ್ಲಿ ಚಂದ್ರಮೌಳೀಶ್ವರ ದೇವರ ಲಿಂಗವಿದೆ. ಈ ದೇವಸ್ಥಾನ ಶಿಲ್ಪಕಲೆಗೆ ಖ್ಯಾತವಾಗಿದೆ. == ಇತಿಹಾಸ == ಚಂದ್ರಮೌಳೀಶ್ವರ ದೇವಾಲಯವು ಸುಮಾರು ೯೦೦ ವರ್ಷಗಷ್ಟು ಹಳೆಯದು. ಇದು ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ಇದನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ದೇವಾಲಯಗಳ ಮಾದರಿ ಯಲ್ಲಿ ಕಟ್ಟಲಾಗಿದೆ. ಇದೊಂದು ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ಸ್ಮಾರಕವಾಗಿದ್ದು ಇದನ್ನು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಇದು ಚಾಲುಕ್ಯ ಶೈಲಿಯ ದೇವಾಲಯವಾಗಿದೆ. == ವಿವರಗಳು == ಚಂದ್ರಮೌಳೀಶ್ವರ ದೇವಾಲಯವು ಉತ್ತರ ಕರ್ನಾಟಕದ ಇತರೆ ಶಿವ ದೇವಾಲಯಗಳಿಗಿಂತ ಭಿನ್ನವಾಗಿದೆ. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿವೆ. ಒಟ್ಟು ಹನ್ನೆರಡು ಬಾಗಿಲುಗಳಿವೆ. ಎರಡು ಶಿವಲಿಂಗಗಳಿದ್ದು ದ್ವಾರದಲ್ಲಿ ಎಲ್ಲ ಶಿವ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ನಂದಿಯ ವಿಗ್ರಹ ಇದೆ. ಒಂದು ಶಿವಲಿಂಗವು ಚತುರ್ಮುಖ ಲಿಂಗವಾಗಿದ್ದು ಅದು ಈ ದೇವಾಲಯದ ವಿಶೇಷವಾಗಿದೆ. ಆದುದರಿಂದ ಇದನ್ನು ಚತುರ್ಲಿಂಗೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. == ವಿಶೇಷತೆ == ದೇವಾಲಯದಲ್ಲಿ ನಂದಿಯ ಎರಡು ವಿಗ್ರಹಗಳಿವೆ. ದೇವಾಲಯದ ನಡುವೆ ಗರ್ಭಗುಡಿಯಿದ್ದು ಈ ಗರ್ಭಗುಡಿಗೆ ನಾಲ್ಕು ಬಾಗಿಲುಗಳಿವೆ. ಈ ಬಾಗಿಲುಗಳ ಮೇಲೆ ಮತ್ತು ಕೆಳಗೆ ಸುಂದರ ಕೆತ್ತನೆಗಳಿವೆ. ದೇವಾಲಯದ ಜಾಲಂಧರಗಳಲ್ಲಿ, ಗೋಡೆಗಳಲ್ಲಿ, ಹೊರಭಾಗದಲ್ಲಿ ಎಲ್ಲ ಕಡೆ ಸುಂದರ ಕೆತ್ತನೆಗಳಿವೆ. ಈ ದೇವಾಲಯದಲ್ಲಿ ಈಗಲೂ ಪೂಜೆ ಇದೆ. == ಉಲ್ಲೇಖ ==